ಕೋಲ್ಕತ್ತಾದ ಬೀದಿ ಮಕ್ಕಳಿಗೆ ಉಚಿತ ಊಟ ಮತ್ತು ಆರೋಗ್ಯ ತಪಾಸಣೆ ನೀಡುತ್ತಿರುವ ಎಂಜಿನೀಯರಿಂಗ್ ಪ್ರಾಧ್ಯಾಪಕ

ಚಂದ್ರ ಶೇಖರ್ ಕುಂದು ಪ್ರಾರಂಭಿಸಿದ ಫೀಡ್, ಮಕ್ಕಳ ಆರೋಗ್ಯ ರಕ್ಷಣೆಯ ಜೊತೆಗೆ ಪೌಷ್ಠಿಕಾಂಶವನ್ನು ಒದಗಿಸುತ್ತದೆ.

ಕೋಲ್ಕತ್ತಾದ ಬೀದಿ ಮಕ್ಕಳಿಗೆ ಉಚಿತ ಊಟ ಮತ್ತು ಆರೋಗ್ಯ ತಪಾಸಣೆ ನೀಡುತ್ತಿರುವ ಎಂಜಿನೀಯರಿಂಗ್ ಪ್ರಾಧ್ಯಾಪಕ

Wednesday January 29, 2020,

2 min Read

ಭಾರತದಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಗಮನಾರ್ಹವಾಗಿದೆ. ಆಹಾರ ನಿರ್ವಹಣೆ ಮತ್ತು ಶೇಖರಣೆಯ ಕೊರತೆಯಿಂದಾಗಿ, ಭಾರತವು ಉತ್ಪಾದಿಸುವ ಆಹಾರದ 40 ಪ್ರತಿಶತವನ್ನು ವ್ಯರ್ಥ ಮಾಡುತ್ತದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಪಶ್ಚಿಮ ಬಂಗಾಳದ ಅಸನ್ಸೋಲ್‌ನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಶಿಕ್ಷಕ ಚಂದ್ರ ಶೇಖರ್ ಕುಂದು ಅವರ ಮನಸ್ಸನ್ನು ತಟ್ಟಿದರು.


ಬಡವರ ಅಗತ್ಯಗಳನ್ನು ಪೂರೈಸುವ ಯೋಜನೆಯನ್ನು ಗಮನದಲ್ಲಿಟ್ಟುಕೊಂಡು, ಚಂದ್ರ ಅವರು 2016 ರಲ್ಲಿ ಫೀಡ್ (ಆಹಾರ ಶಿಕ್ಷಣ ಮತ್ತು ಆರ್ಥಿಕ ಅಭಿವೃದ್ಧಿ) ಎಂಬ ಲಾಭರಹಿತ ಸಂಸ್ಥೆಯನ್ನು ಸ್ಥಾಪಿಸಿದರು. ಈಗ ತಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳ ಸಹಾಯದಿಂದ ಯಾವುದೇ ದೇಣಿಗೆ ಅಥವಾ ಹಣವನ್ನು ಸ್ವೀಕರಿಸದೆ ಸಂಸ್ಥೆಯನ್ನು ನಡೆಸುತ್ತಿದ್ದಾರೆ.


ಮಕ್ಕಳೊಂದಿಗೆ ಚಂದ್ರ (ಚಿತ್ರಕೃಪೆ: ಔಟ್ ಲುಕ್ ಇಂಡಿಯಾ)


ಇದರ ಕುರಿತು ಔಟ್ ಲುಕ್ ಇಂಡಿಯಾ ಜೊತೆ ಮಾತನಾಡಿದ ಚಂದ್ರ ಅವರು,


"ನಾನು ಹಣ ಸಂಪಾದಿಸಲು ಅದರಲ್ಲಿಲ್ಲ ಮತ್ತು ಜನರಿಗೆ ಆ ಅನಿಸಿಕೆ ಬರುವುದಕ್ಕೆ ನಾನು ಬಯಸುವುದಿಲ್ಲ. ಫೀಡ್ ಸದಸ್ಯರು ಆಹಾರಕ್ಕಾಗಿ ರೆಸ್ಟೋರೆಂಟ್ ಮತ್ತು ಹೋಟೆಲ್ಗಳೊಂದಿಗೆ ತೊಡಗಿಕೊಳ್ಳಲು ಬಯಸುವುದಿಲ್ಲ. ಅವರು ಬಹಳ ಸಮಯದವರೆಗೆ ಆಹಾರವನ್ನು ಸಂಗ್ರಹಿಸುತ್ತಾರೆ. ನಾವು ಮಕ್ಕಳಿಗೆ ಹಳೆಯ ಆಹಾರವನ್ನು ನೀಡುವುದಿಲ್ಲ,” ಎಂದರು.


ಫೀಡ್ ಮಕ್ಕಳ ಆರೋಗ್ಯ ರಕ್ಷಣೆಯ ಜೊತೆಗೆ ಪೌಷ್ಠಿಕಾಂಶವನ್ನು ಒದಗಿಸುತ್ತದೆ. ಇದು ರಸ್ತೆಬದಿಯ ಫುಟ್‌ಪಾತ್‌ನಲ್ಲಿ ತಾತ್ಕಾಲಿಕ ಕ್ಲಿನಿಕ್ ಅನ್ನು ಸ್ಥಾಪಿಸಿದೆ. ವೈದ್ಯರು ಬೀದಿ ಮಕ್ಕಳಿಗೆ ಚಿಕಿತ್ಸೆ ನೀಡುತ್ತಾರೆ. ಇಲ್ಲಿಯವರೆಗೆ ಫೀಡ್ ಸಂಸ್ಥೆ 150 ಮಕ್ಕಳಿಗೆ ಚಿಕಿತ್ಸೆ ನೀಡಿದೆ.


ಆರಂಭದಲ್ಲಿ ಕೋಲ್ಕತ್ತಾದ ಸದರ್ನ್ ಅವೆನ್ಯೂದಲ್ಲಿ ಸ್ಥಾಪಿಸಲಾದ ಈ ಕ್ಲಿನಿಕ್ಅನ್ನು ಗರಿಯಾಹತ್ ಮತ್ತು ನಗರದ ಇನ್ನೂ ಒಂದೆರಡು ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ.


ಎಡೆಕ್ಸ್ ಲೈವ್ ಜೊತೆ ಮಾತನಾಡುತ್ತಾ ಚಂದ್ರು, “ನಾನು ಬೀದಿ ಮಕ್ಕಳೊಂದಿಗೆ ಅಸನ್ಸೋಲ್ ಮತ್ತು ಕೋಲ್ಕತ್ತಾದ ಕೆಲವು ಭಾಗಗಳಲ್ಲಿ ಕೆಲಸ ಮಾಡುತ್ತಿದ್ದೆ, ಹಾಗೆ ಮಾಡುವಾಗ ನಾನು ಅನಾರೋಗ್ಯದಿಂದ ಬಳಲುತ್ತಿರುವ ಬಹಳಷ್ಟು ಮಕ್ಕಳನ್ನು ನೋಡುತ್ತಿದ್ದೆ. ಆದರೆ ಸರಿಯಾದ ಚಿಕಿತ್ಸೆ ನೀಡಲಾಗುತ್ತಿರಲಿಲ್ಲ ಮತ್ತು ಅಗತ್ಯವಿದ್ದಾಗ ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯುಲಾಗುತ್ತಿರಲಿಲ್ಲ. ಬಿಪಿಎಲ್ ವರ್ಗದ ಜನರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಉಚಿತ ಇರುತ್ತದೆ ಯಾಕೆ ಅವರನ್ನು ಆಸ್ಪತ್ರೆಯಲ್ಲಿ ತೆಗೆದುಕೊಳ್ಳುವುದಿಲ್ಲ ಎಂದು ನಾನು ಪೋಷಕರನ್ನು ಕೇಳಿದಾಗ, ಪ್ರಕರಣವು ಅತ್ಯಂತ ಗಂಭೀರವಾಗದ ಹೊರತು ಆಂಬುಲೆನ್ಸ್ ಬರುವುದಿಲ್ಲ ಎಂದು ಅವರು ಹೇಳಿದರು,” ಎಂದರು.


ಫೀಡ್ ನಿರ್ವಹಿಸುವ ರಸ್ತೆಬದಿಯ ಚಿಕಿತ್ಸಾಲಯಗಳಲ್ಲಿ 40 ಕ್ಕೂ ಹೆಚ್ಚು ವೈದ್ಯರಿದ್ದಾರೆ, ಹೆಚ್ಚಾಗಿ ಮಕ್ಕಳ ತಜ್ಞರಿದ್ದಾರೆ. ಇದಲ್ಲದೆ, ಎಲ್ಲಾ ಚಿಕಿತ್ಸೆಯನ್ನು ಯಾವುದೇ ಹಣ ತೆಗೆದುಕೊಳ್ಳದೆ ಮಾಡಲಾಗುತ್ತದೆ ಮತ್ತು ಔಷಧಿಗಳನ್ನು ಉಚಿತವಾಗಿ ನೀಡಲಾಗುತ್ತದೆ. ಚಿಕಿತ್ಸಾಲಯದ ನಾಲ್ಕರಿಂದ ಐದು ವೈದ್ಯರು ಮಕ್ಕಳಿಗೆ ಆವರ್ತಕ ಆಧಾರದ ಮೇಲೆ ಚಿಕಿತ್ಸೆ ನೀಡುತ್ತಾರೆ.


ಮಕ್ಕಳನ್ನು ಪರಿಶೀಲಿಸುತ್ತಿರುವ ವೈದ್ಯರು (ಚಿತ್ರಕೃಪೆ: ಎಡೆಕ್ಸ್ ಲೈವ್‌)




ಗಂಭೀರ ವೈದ್ಯಕೀಯ ಸ್ಥಿತಿಯ ಸಂದರ್ಭದಲ್ಲಿ ವೈದ್ಯರು ಮಕ್ಕಳನ್ನು ಹತ್ತಿರದ ಆಸ್ಪತ್ರೆಗೆ ಕಳುಹಿಸುತ್ತಾರೆ. ಅಲ್ಲಿ ಐಎಪಿ (ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್) ಕಾರ್ಯಾಚರಣೆಯ ವೆಚ್ಚವನ್ನು ನೋಡಿಕೊಳ್ಳುತ್ತದೆ.


“ನಾನು ನಗರಗಳಾದ್ಯಂತ ಹೆಚ್ಚಿನ ಕೇಂದ್ರಗಳನ್ನು ತೆರೆಯಲು ಬಯಸುತ್ತೇನೆ ಇದರಿಂದ ಜನರು ಸ್ಪೂರ್ತಿ ಪಡೆಯುತ್ತಾರೆ. ವೈದ್ಯರು ಬರೀ ಹಣ ಬಯಸುತ್ತಾರೆ ಅಥವಾ ಅವರು ಉದ್ಯಮಿಗಳೆಂದು ನಾವು ಭಾವಿಸಿದರೆ ಅದು ತಪ್ಪು, ಏಕೆಂದರೆ ಸಮಾಜ ಮತ್ತು ಈ ಮಕ್ಕಳಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಬಯಸುವವರು ಬಹಳಷ್ಟು ಮಂದಿ ಇದ್ದಾರೆ, ಆದರೆ ಅವರಿಗೆ ವೇದಿಕೆ ಸಿಗುವುದಿಲ್ಲ. ಆದ್ದರಿಂದ ನಾವು ಅಂತಹ ಹೆಚ್ಚಿನ ಪ್ಲಾಟ್‌ಫಾರ್ಮ್‌ಗಳನ್ನು ವಿಸ್ತರಿಸುವುದನ್ನು ಮುಂದುವರಿಸುತ್ತೇವೆ,” ಎಂದು ಚಂದ್ರ ಹೇಳುತ್ತಾರೆ.

ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.