ಕಟ್ಟಡ ತ್ಯಾಜ್ಯ ನಿರ್ವಹಣೆಗೆ ತೃತೀಯ ಲಿಂಗಿಗಳನ್ನು ನೇಮಿಸಿದ ಒಡಿಶಾ ಸರ್ಕಾರ

ಈ ನಡೆಯಿಂದ ಒಡಿಶಾದ ಮಹಿಳಾ ಸಬಲೀಕರಣ ಉಪಕ್ರಮವಾದ ಮಿಷನ್‌ ಶಕ್ತಿಯ ತೃತೀಯ ಲಿಂಗಿಗಳ ಸಮುದಾಯ ಮತ್ತು ಸದಸ್ಯರಿಗೆ ಒಂದು ಆದಾಯ ಮಾರ್ಗ ಸೃಷ್ಟಿಯಾಗುತ್ತದೆ.

ಕಟ್ಟಡ ತ್ಯಾಜ್ಯ ನಿರ್ವಹಣೆಗೆ ತೃತೀಯ ಲಿಂಗಿಗಳನ್ನು ನೇಮಿಸಿದ ಒಡಿಶಾ ಸರ್ಕಾರ

Friday February 05, 2021,

2 min Read

ತೃತೀಯ ಲಿಂಗಿ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತಂದು ಅವರಿಗೆ ಉದ್ಯೋಗ ಕಲ್ಪಿಸಿಕೊಡಲು ಒಡಿಶಾ ಸರ್ಕಾರ ನಗರ ಪ್ರದೇಶಗಳ ಕಟ್ಟಡ ಉರುಳಿಸುವಿಕೆಗಳಿಂದುಂಟಾಗುವ ತ್ಯಾಜ್ಯ ನಿರ್ವಹಣೆಯಲ್ಲಿ ಅವರನ್ನು ಒಳಗೊಳ್ಳುವ ಹೊಸ ತಂತ್ರವನ್ನು ಘೋಷಿಸಿದೆ. ನಗರ ಸ್ಥಳೀಯ ಪ್ರದೇಶ(ಯುಎಲ್‌ಬಿ)ಗಳಲ್ಲಿ ಉಂಟಾಗುವ ಈ ರೀತಿಯ ತ್ಯಾಜ್ಯವನ್ನು ಸಮರ್ಥವಾಗಿ ನಿರ್ವಹಿಸಲು ಒಡಿಶಾ ಸರ್ಕಾರ ರಾಜ್ಯದ ಮಹಿಳಾ ಸಬಲೀಕರಣ ಉಪಕ್ರಮವಾದ ಮಿಷನ್‌ ಶಕ್ತಿಯ ತೃತೀಯ ಲಿಂಗಿಗಳ ಸಮುದಾಯ ಮತ್ತು ಸದಸ್ಯರನ್ನು ನೇಮಿಸಲು ನಿರ್ಧರಿಸಿದೆ.


ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ರಾಜ್ಯ ಆಡಳಿತ, ಜಿಲ್ಲಾಧಿಕಾರಿಗಳು, ಪುರಸಭೆ ಆಯುಕ್ತರು ಮತ್ತು ಪುರಸಭೆಗಳು ಮತ್ತು ಅಧಿಸೂಚಿತ ಪ್ರದೇಶ ಮಂಡಳಿಗಳ (ಎನ್‌ಎಸಿ) ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರದ ಮೂಲಕ ಈ ನಿರ್ಧಾರವನ್ನು ತಿಳಿಸಲಾಗಿದೆ.


ತ್ಯಾಜ್ಯವನ್ನು ಸಂಗ್ರಹಿಸಿ, ಆ ನಗರದ ನ್ಯಾಯವ್ಯಾಪ್ತಿಯಲ್ಲಿ ಬರುವ ತ್ಯಾಜ್ಯ ನಿರ್ವಹಣಾ ಘಟಕಗಳಿಗೆ ವರ್ಗಾಯಿಸುವುದಕ್ಕಾಗಿ ಯುಎಲ್‌ಬಿ ಮಿಷನ್‌ ಶಕ್ತಿ ಅಥವಾ ತೃತೀಯ ಲಿಂಗಿ ಸಮುದಾಯ ಸದಸ್ಯರೊಂದಿಗೆ ಒಪ್ಪಂದ ಮಾಡಿಕೊಳ್ಳಲಿದೆ ಎಂದರು ಆಯುಕ್ತರು ಮತ್ತು ವಸತಿ ಮತ್ತು ನಗರಾಭಿವೃದ್ಧಿ ಕಾರ್ಯದರ್ಶಿಯಾದ ಜಿ ಮಾಧವನನ್‌.


ತ್ಯಾಜ್ಯ ಸಂಗ್ರಹಣೆ ಮತ್ತು ವರ್ಗಾವಣೆಗೆ ತಗಲುವ ವೆಚ್ಚವನ್ನು ತ್ಯಾಜ್ಯದ ಸೃಷ್ಟಿಕಾರರೆ ಒದಗಿಸಬೇಕಾಗುತ್ತದೆ ಮತ್ತು ದಿನಕ್ಕೆ 20 ಟನ್‌ಗೂ ಅಧಿಕ ಮತ್ತು 30 ದಿನಕ್ಕೆ 300 ಟನ್‌ಗೂ ಅಧಿಕ ತ್ಯಾಜ್ಯ ಸೃಷ್ಟಿ ಮಾಡುವ ದೊಡ್ಡ ಸಂಸ್ಥೆಗಳು ಯಾವುದೇ ರೀತಿಯ ಕಟ್ಟಡ ಮತ್ತು ಉರುಳಿಸುವಿಕೆ ಕಾರ್ಯಚರನೆಗಳನ್ನು ಪ್ರಾರಂಭಿಸುವ ಮೊದಲು ಯುಎಲ್‌ಬಿಗೆ ತ್ಯಾಜ್ಯ ನಿರ್ವಹಣಾ ಯೋಜನೆಯನ್ನು ಒದಗಿಸಬೇಕಾಗುತ್ತದೆ. ಹೊಸ ಬದಲಾವಣೆ ಕಟ್ಟಡ ಮತ್ತು ಉರುಳಿಸುವಿಕೆಯ ತ್ಯಾಜ್ಯದ ನಿರ್ವಹಣೆ ಮತ್ತು ಪ್ರಕ್ರಿಯಾ ಶುಲ್ಕವನ್ನು ಒಳಗೊಂಡಿರುತ್ತದೆ.


ಯುಎಲ್‌ಬಿನಲ್ಲಿರುವ ತ್ಯಾಜ್ಯ ಪರಿಷ್ಕರಣೆ ಘಟಕಗಳನ್ನು ತಂಡಗಳು ನಿರ್ವಹಿಸಲಿದ್ದು, ಅವು ಸ್ಥಳೀಯ ನಾಗರಿಕ ಸಂಸ್ಥೆಗಳಡಿ ಕಾರ್ಯನಿರ್ವಹಿಸುತ್ತವೆ. ಈ ತಂಡಗಳಿಗೆ ಇಟ್ಟಿಗೆ, ಟೈಲ್ಸ್‌, ಪೇವರ್‌ ಬ್ಲಾಕ್‌ ಮತ್ತು ಕರ್ಬಸ್ಟೋನ್ಸ್‌ನಂತಹ ಮರುಬಳಕೆ ಮಾಡಿದ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು ಬೆಂಬಲವೂ ದೊರೆಯುತ್ತದೆ.


ಈ ನಡೆ ತ್ಯಾಜ್ಯ ನಿರ್ವಹಣೆ ಸಮಸ್ಯೆಗೆ ಪರಿಹಾರವನ್ನಷ್ಟೆ ನೀಡದೆ ಸಮಾಜದ ಅಂಚಿನಲ್ಲಿರುವ ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದರು. ಮತ್ತು ಈ ನಡೆ ತ್ಯಾಜ್ಯ ನಿರ್ವಹಣೆ, ಉದ್ಯೋಗ ಸೃಷ್ಟಿ ಮತ್ತು ಹಲವರಿಗೆ ಆದಾಯ ಮಾರ್ಗ ಕಲ್ಪಿಸಿಕೊಡಲಿದೆ ಎಂದು ಸರ್ಕಾರ ತಿಳಿಸಿದೆ.


ಅನಧಿಕೃತ ಡಂಪಿಂಗ್ ತಾಣಗಳಲ್ಲಿ ಲೋಡ್ ಮಾಡಲಾಗಿರುವ ತ್ಯಾಜ್ಯವನ್ನು ಪತ್ತೆ ಮಾಡಿ ಅದನ್ನು ಸೂಕ್ತವಾಗಿ ವಿಲೇವಾರಿ ಮಾಡಲು ಕಣ್ಗಾವಲು ತಂಡಗಳನ್ನು ರಚಿಸುವಂತೆ ಸರ್ಕಾರ ಯುಎಲ್‌ಬಿಗಳಿಗೆ ನಿರ್ದೇಶನ ನೀಡಿದೆ. ಕಣ್ಗಾವಲು ತಂಡವು ಕಾಲಕಾಲಕ್ಕೆ ನಾಗರಿಕ ಸಂಸ್ಥೆಯ ತ್ಯಾಜ್ಯ ನಿರ್ವಹಣಾ ಯೋಜನೆಯನ್ನು ಮೇಲ್ವಿಚಾರಣೆ ಮಾಡಲಿದೆ.