ಪ್ಲಾಸ್ಟಿಕ್ ಸಮಸ್ಯೆಗಳನ್ನು ಬಗೆಹರಿಸುತ್ತ ಹಸಿವನ್ನು ನೀಗಿಸುವ 'ರೈಸ್‌ ಫಾರ್ ಪ್ಲಾಸ್ಟಿಕ್" ಅಭಿಯಾನದ ಮೂಲಕ ಆಂಧ್ರದ ಯುವಕರು ಹೊಸ ಯೋಜನೆಗೆ ನಾಂದಿ ಹಾಡಿದ್ದಾರೆ

ಆಂಧ್ರಪ್ರದೇಶದ ಯುವ ಸಮೂಹವೊಂದು ಪ್ಲಾಸ್ಟಿಕ್, ಅದರ ಮರುಬಳಕೆ ಹಾಗೂ ಅಪೌಷ್ಟಿಕತೆ ಈ ಮೂರು ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುವ ಉದ್ದೇಶದಿಂದ ಪ್ಲಾಸ್ಟಿಕ್ ವಿನಿಮಯ ಪದ್ಧತಿಯ ಮೂಲಕ ಅಕ್ಕಿಯನ್ನು ವಿತರಿಸುವ ಯೋಜನೆಗೆ ಮುನ್ನುಡಿ ಬರೆದಿದ್ದಾರೆ‌.

ಪ್ಲಾಸ್ಟಿಕ್ ಸಮಸ್ಯೆಗಳನ್ನು ಬಗೆಹರಿಸುತ್ತ ಹಸಿವನ್ನು ನೀಗಿಸುವ 'ರೈಸ್‌ ಫಾರ್ ಪ್ಲಾಸ್ಟಿಕ್" ಅಭಿಯಾನದ ಮೂಲಕ ಆಂಧ್ರದ ಯುವಕರು ಹೊಸ ಯೋಜನೆಗೆ ನಾಂದಿ ಹಾಡಿದ್ದಾರೆ

Wednesday October 09, 2019,

2 min Read

ಇಂದು ನಮ್ಮ ದೇಶವು ಪೌಷ್ಟಿಕಾಂಶ ಮತ್ತು ತ್ಯಾಜ್ಯ ನಿರ್ವಹಣೆಯ ಎರಡು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅದಕ್ಕಾಗಿ ಪೆದ್ದಾಪುರಂನ ಎನ್.ಜಿ.ಓ ವೊಂದು ಹೊಸದೊಂದು ನವೀನವಾದ ವಿನಿಮಯ ಪದ್ಧತಿಯ ಮೂಲಕ ಅದನ್ನು ಬಗೆಹರಿಸುವ ಯೋಜನೆ ಹಾಕಿದ್ದಾರೆ. 2015 ರ ಭಾರತದ ಆಹಾರ ಮತ್ತು ಕೃಷಿ ಸಂಸ್ಥೆ ಪ್ರಕಟಿಸಿರುವ ಪ್ರಕಾರ 194.6 ಮಿಲಿಯನ್ ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಹಸಿವು ಹಾಗೂ ಅದರ ಸಂಬಂಧಿತ ಖಾಯಿಲೆಗಳಿಂದ ಪ್ರತಿದಿನ ಸುಮಾರು 3,000 ಜನರು ಮರಣ ಹೊಂದುತ್ತಿದ್ದಾರೆ.


ಭಾರತ ದೇಶವೊಂದರಲ್ಲಿಯೆ 25 ಲಕ್ಷ ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಅದರಲ್ಲಿ ಕೇವಲ 9% ಮಾತ್ರ‌ ಮರುಬಳಕೆಯಾಗುತ್ತದೆ. ಈ ಎರಡು ವಿಷಯಗಳು ಪೂರ್ವ ಗೋದಾವರಿ ಜಿಲ್ಲೆಯ ಮನ ಪೆದ್ದಾಪುರಂನ ಯುವ ಗುಂಪಿನ‌ ಸದಸ್ಯರ‌ ಮನಸ್ಸಿನಲ್ಲಿ ಅಚ್ಚೊತ್ತಿದ್ದವು. ಅದಕ್ಕಾಗಿಯೇ "ರೈಸ್ ಫಾರ್ ಪ್ಲಾಸ್ಟಿಕ್" ಎಂಬ ಅಭಿಯಾನದ ಮೂಲಕ ಅವರು ಅಪೌಷ್ಟಿಕತೆ ಹಾಗೂ ಪ್ಲಾಸ್ಟಿಸೈಡ್ ಎರಡನ್ನೂ ನಿಭಾಯಿಸುವ ಮೂಲಕ ಈ ಸಮಸ್ಯೆಗಳನ್ನು ಪರಿಹರಿಸಲು ಪಣ ತೊಟ್ಟಿದ್ದಾರೆ.


ಪ್ಲಾಸ್ಟಿಕ್ ವಿನಿಮಯ ಪದ್ಧತಿಯ ಮೂಲಕ ಅಕ್ಕಿ ನೀಡಲಾಗುತ್ತಿರುವುದು (ಚಿತ್ರಕೃಪೆ: ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌)




ಮಹಾತ್ಮ ಗಾಂಧಿಜಿಯವರ 150ನೇ ಜನ್ಮ ದಿನಾಚರಣೆಯಂದು (ಅಕ್ಟೋಬರ್ 2 ರಂದು) ಪ್ರಾರಂಭವಾಗಿದ್ದು ಈ ತಂಡವು ಈಗಾಗಲೇ 300 ಕೆಜಿ ಪ್ಲಾಸ್ಟಿಕ್ ಸಂಗ್ರಹಿಸಿದ್ದು ಮತ್ತು 200 ಕೆಜಿ ಅಕ್ಕಿ ವಿತರಿಸಲಾಗಿದೆ. ಇದಕ್ಕೆ ಹೆಚ್ಚುವರಿಯಾಗಿ ಅಭಿಯಾನದ ಮುಂದಿನ ಎರಡು ದಿನಗಳಲ್ಲಿಯೆ 150 ಕೆಜಿ ಪ್ಲಾಸ್ಟಿಕ್ ಸಂಗ್ರಹಿಸಲಾಗಿದೆ.


ಮಾನವ ಸಂಪನ್ಮೂಲ ವಿಷಯದಲ್ಲಿ ಎಂಬಿಎ ಮಾಡಿರುವ ನರೇಶ್‌ ಪೆಡಿರೆಡ್ಡಿ ಅವರು ಭಾರತವನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಮತ್ತು ಹಸಿವಿನ ವಿರುದ್ಧ ಹೋರಾಡಲು ಆಶಿಸಿದ್ದರು.


"ನಾವು ಎರಡು ಪ್ರಮುಖ‌ ಉದ್ದೇಶ ಹೊಂದಿದ್ದೇವೆ. ಒಂದು ಪ್ಲಾಸ್ಟಿಕ್‌ನಿಂದ ಮಾಡಿದ ವಸ್ತುಗಳ ಬಳಕೆಯನ್ನು ತಪ್ಪಿಸುವಲ್ಲಿ ಜನರನ್ನು ಪ್ರೇರೆಪಿಸುವುದು. ಇನ್ನೊಂದು ಹಸಿವಿನ ವಿರುದ್ಧ ಹೋರಾಟ. 'ರೈಸ್ ಫಾರ್ ಪ್ಲಾಸ್ಟಿಕ್' ಅಭಿಯಾನ ನಮ್ಮ ಈ ಎರಡೂ ಉದ್ದೇಶಗಳಿಗೆ ಸಹಾಯ ಮಾಡುತ್ತದೆ" ಎಂದು ನರೇಶ್ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಈಗ ಗೋಡಂಬಿ ವ್ಯಾಪಾರಿಯಾಗಿರುವ ನರೇಶ್, ಸಂಗ್ರಹಿಸಿದ ಪ್ಲಾಸ್ಟಿಕ್ ಪ್ರಮಾಣಕ್ಕೆ ಸಮಾನ ಪ್ರಮಾಣದ ಅಕ್ಕಿಯನ್ನು‌ ನೀಡುವ ಯೋಚನೆಯೊಂದನ್ನು ಹಾಕಿದರು. ಮನ ಪೆದ್ದಾಪುರಂನ ಸಗಟು ಅಕ್ಕಿಯನ್ನು ನೇರವಾಗಿ ಸಗಟು ವ್ಯಾಪಾರಿಗಳಿಂದ ಪ್ರತಿ ಕೆಜಿಗೆ 25 ರೂಪಾಯಿಗಳಂತೆ ಅವರು ತಂದ ಪ್ಲಾಸ್ಟಿಕ್ ಬದಲಿಗೆ (ಏಕ-ಬಳಕೆ) ವಿತರಿಸಲಾಗುತ್ತದೆ. ನಂತರ ಈ ಪ್ಲಾಸ್ಟಿಕ್‌ನ್ನು ನೈರ್ಮಲ್ಯ ಕಾರ್ಮಿಕರಿಗೆ ನೀಡಲಾಗುತ್ತದೆ. ಅದನ್ನು ಪೆದ್ದಾಪುರಂನಲ್ಲಿರುವ ಸರ್ಕಾರಿ ಹಾಗೂ ಖಾಸಗಿ ಒಡೆತನದ ಸ್ಥಾವರಗಳಿಗೆ ಮರುಬಳಕೆ ಮಾಡಲು ನೀಡಲಾಗುತ್ತದೆ.


ದಿ ಲಾಜಿಕಲ್ ಇಂಡಿಯನ್ ಜೊತೆ ಮಾತನಾಡುತ್ತಾ ನರೇಶ್, 


"ಅಕ್ಟೋಬರ್ 2ರ ಮೊದಲು ನಾವು ಪ್ಲಾಸ್ಟಿಕ್‌ ಸಾಮಗ್ರಿಗಳನ್ನು ಅದರಲ್ಲೂ ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ತರುವ ಯಾರಿಗಾದರೂ ಅದರ ಸಮ ಪ್ರಮಾಣದ ಅಕ್ಕಿಯನ್ನು ನೀಡಲಾಗುವುದು ಎಂದು ಘೋಷಿಸಿದ್ದೇವೆ".


ಮನ ಪೆದ್ದಾಪುರಂನಲ್ಲಿ ಸ್ಥಳೀಯರು, ಇತರೆ ಭಾರತೀಯ ರಾಜ್ಯಗಳಿಂದ ಹಾಗೂ ವಿದೇಶಗಳಿಂದ ವಲಸೆ ಬಂದ ಇತರರು ಸೇರಿದಂತೆ 20,000 ಸದಸ್ಯರ ಜಾಲವನ್ನು ಈ ಊರು ಹೊಂದಿದೆ‌.


ಇಲ್ಲಿರುವ ಎಲ್ಲಾ ಸದಸ್ಯರು ಮಧ್ಯಮ ವರ್ಗದ ಕುಟುಂಬಗಳಿಂದ ಬಂದವರು ಹಾಗೂ ಎಲ್ಲರೂ ಉದ್ಯೋಗದಲ್ಲಿರುವುದರಿಂದ ವಾರಕ್ಕೊಮ್ಮೆ ಒಟ್ಟಾಗಿ ಈ ಅಭಿಯಾನವನ್ನು ಮುನ್ನಡೆಸಲು ಈ ತಂಡ ಯೋಜಿಸಿದೆ. ಇದೀಗ, ಸರ್ಕಾರದ ಒಡೆತನದ ಮರುಬಳಕೆಯ ಘಟಕವು ವಿಜಯವಾಡದಲ್ಲಿರುವದರಿಂದ ಪ್ಲಾಸ್ಟಿಕ್ ಮರುಬಳಕೆ‌ ಮಾಡುವ ಸವಾಲನ್ನು ಅವರು ಎದುರಿಸುತ್ತಿದ್ದಾರೆ. ಅದಕ್ಕಾಗಿ ಪೆದ್ದಾಪುರಂನಲ್ಲಿಯೂ ಒಂದು ಘಟಕವನ್ನು ಪ್ರಾರಂಭಿಸುವಂತೆ ನರೇಶ್ ಅವರು ಸರ್ಕಾರವನ್ನು ಕೋರಿದ್ದಾರೆ.


"ನಾವು ಅಭಿಯಾನವನ್ನು ಮುಂದುವರೆಸುತ್ತೇವೆ‌. ನಮ್ಮಲ್ಲಿ ಹೆಚ್ಚಿನವರು ಆಫೀಸ್ಗೆ ಹೋಗುವುದು ಮತ್ತು ವ್ಯವಹಾರಗಳನ್ನು ನೋಡಿಕೊಳ್ಳುವುದಿರುತ್ತದೆ‌. ಅದಕ್ಕಾಗಿ ನಮಗೆ ಮಾನವಶಕ್ತಿಯ ಹೆಚ್ಚಿನ ಅಗತ್ಯವಿದೆ ಮತ್ತು ಭಾನುವಾರದ ದಿನದಂದು ಈ ವಿನಿಮಯ ಪದ್ಧತಿಯನ್ನು ನಡೆಸುತ್ತೇವೆ,” ಎಂದು ನರೇಶ್ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.