ಜೆಇಇ-2020 ಪರೀಕ್ಷೆಯಲ್ಲಿ‌ 99% ಅಂಕಗಳನ್ನು ಗಳಿಸಿದ ಹರಿಯಾಣದ ಬಡ ಕುಟುಂಬದ ಈ ಇಬ್ಬರು ಹೆಣ್ಣುಮಕ್ಕಳು

ಹರಿಯಾಣದ ರೋಹ್ಟಕ್‌ನ ಹಸಂಗ್ರಾ ಗ್ರಾಮದ ಸಿಮ್ರಾನ್, ಫತೇಹಬಾದ್‌‌ನ ಇಂಡಚಾಯ್‌ ಗ್ರಾಮದ ಕಾಜಲ್ ಇವರಿಬ್ಬರೂ ಜೆಇಇ ಪರೀಕ್ಷೆಯಲ್ಲಿ 99% ಅಂಕಗಳನ್ನು ಗಳಿಸಿದ್ದಾರೆ.

ಜೆಇಇ-2020 ಪರೀಕ್ಷೆಯಲ್ಲಿ‌ 99% ಅಂಕಗಳನ್ನು ಗಳಿಸಿದ ಹರಿಯಾಣದ ಬಡ ಕುಟುಂಬದ ಈ ಇಬ್ಬರು ಹೆಣ್ಣುಮಕ್ಕಳು

Thursday January 23, 2020,

2 min Read

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಗಾದೆ ಮಾತೊಂದಿದೆ. ಇಂದು ಹೆಣ್ಣುಮಕ್ಕಳು ಯಾವುದೇ ಕ್ಷೇತ್ರದಲ್ಲಿಯೂ ಹಿಂದೆ ಉಳಿದಿಲ್ಲ. ಹಾಗೇ ಕಲಿಕೆಗೆ ಬಡವ, ಶ್ರೀಮಂತ ಎಂಬ ಯಾವ ಭೇದವೂ ಇಲ್ಲ. ಕಲಿಯಬೇಕೆನ್ನುವ ಶ್ರದ್ಧೆ, ಹುಮ್ಮಸ್ಸು ಇರಬೇಕಷ್ಟೆ. ಹಾಗೇ ಅದಕ್ಕಾಗಿ ಶ್ರಮವಹಿಸಬೇಕು.


ಹರಿಯಾಣದ ರೋಹ್ಟಕ್‌ನ ಹಸಂಗ್ರಾ ಗ್ರಾಮದ ಸಿಮ್ರಾನ್, ಫತೇಹಬಾದ್‌‌ನ ಇಂಡಚಾಯ್‌ ಗ್ರಾಮದ ಕಾಜಲ್ ಎಂಬುವವರು ಬಡ ಕುಟುಂಬದಿಂದ ಬಂದು ಜೆಇಇ-2020ರ ಪರೀಕ್ಷೆಯಲ್ಲಿ ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಮೂಲಕ ನಾವು ಯಾವುದರಲ್ಲಿ ಕಡಿಮೆಯಿಲ್ಲ‌ ಎಂದು ನಿರೂಪಿಸಿದ್ದಾರೆ‌.


ಜೆಇಇ ಪರೀಕ್ಷೆಯನ್ನು ಅತ್ಯುನ್ನತ ಅಂಕಗಳೊಂದಿಗೆ ಉತೀರ್ಣರಾದ ಹರಿಯಾಣದ ರೋಹ್ಟಕ್‌ನ ಹಸಂಗ್ರಾ ಗ್ರಾಮದ ಸಿಮ್ರಾನ್, ಫತೇಹಬಾದ್‌‌ನ ಇಂಡಚಾಯ್‌ ಗ್ರಾಮದ ಕಾಜಲ್ (ಚಿತ್ರಕೃಪೆ: ಹಿಂದೂಸ್ಥಾನ್ ಟೈಮ್ಸ್)




ಹೆಣ್ಣುಮಕ್ಕಳು ಹೆತ್ತವರಿಗೆ ಹೊರೆಯಾಗುತ್ತಾರೆ, ಅವರಿಂದ ಅವರು ಇಂಜನಿಯರ್ ಆಗಲು ಸಾಧ್ಯವಿಲ್ಲ ಎಂಬಂತಹ ಏಕರೂಪ ಮಾದರಿಗಳು ಇನ್ನೂ ಅನೇಕ ಜನರ ಮನಸಲ್ಲಿ ಬೇರೂರಿದೆ. ಇಂತಹ ಏಕರೂಪ ಮಾದರಿಯನ್ನು ಈ ಇಬ್ಬರೂ ಹೆಣ್ಣುಮಕ್ಕಳು ಜೆಇಇ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಮುರಿದಿದ್ದಾರೆ. ದೇಶಾದ್ಯಂತ ನಡೆದ ಇಂಜನಿಯರಿಂಗ್ ಕಾಲೇಜು ಪ್ರವೇಶಕ್ಕಾಗಿ ನಡೆದ ಜೆಇಇ (ಜಾಯಿಂಟ್ ಎಂಟ್ರರೆನ್ಸ್ ಎಕ್ಸಾಮಿನೇಷನ್) ರೋಹ್ಟಕ್‌ನ ಹಸಂಗ್ರಾ ಗ್ರಾಮದ ಸಿಮ್ರಾನ್, ಫತೇಹಬಾದ್‌‌ನ ಇಂಡಚಾಯ್‌ ಗ್ರಾಮದ ಕಾಜಲ್ ಕ್ರಮವಾಗಿ 99.47% ಮತ್ತು 99.31% ಅಂಕಗಳನ್ನು ಗಳಿಸಿದ್ದಾರೆ, ವರದಿ ಕಾಲೇಜ್‌ದೇಖೊ.


ಹರಿಯಾಣ ಸರ್ಕಾರದ ಬಡ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದಕ್ಕಾಗಿರುವ ‘ಸೂಪರ್ - 100' ಎಂಬ ಕಾರ್ಯಕ್ರಮದಲ್ಲಿ ದಾಖಲಾದ 48 ವಿದ್ಯಾರ್ಥಿಗಳಲ್ಲಿ 46 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅದರಲ್ಲಿ ಈ ಇಬ್ಬರೂ ವಿದ್ಯಾರ್ಥಿನಿಯರು ಸೇರಿದ್ದಾರೆ.


ಹಿಂದೂಸ್ಥಾನ್ ಟೈಮ್ಸ್ ಜೊತೆ ತಮ್ಮ‌ ಸಂತಸವನ್ನು ಹಂಚಿಕೊಂಡ ಸಿಮ್ರಾನ್,


"ನಾನು ನಮ್ಮ ಹಳ್ಳಿಯ ಶಾಲೆಯಲ್ಲಿಯೆ ಓದಿದ್ದು, 90%ಕ್ಕಿಂತ ಅಂಕಗಳನ್ನು ಗಳಿಸಿದ್ದೆ. ನನ್ನ ತಂದೆ‌ ಎರಡು ಎಕರೆಗಿಂತ ಕಡಿಮೆ ಭೂಮಿಯನ್ನು ಹೊಂದಿದ್ದಾರೆ. ಕೆಲವು ವರ್ಷಗಳ ಹಿಂದೆ ಅಪಘಾತಕ್ಕೆ ಒಳಗಾಗಿದ್ದರು ಮತ್ತು ಪಾರ್ಶ್ವವಾಯುವಿಗೂ ತುತ್ತಾಗಿದ್ದರು, ನನಗೆ ಹಾಗೂ ನನ್ನ ಒಡಹುಟ್ಟಿದವರಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೆಇಇ ಪರೀಕ್ಷೆಯನ್ನು ಭೇದಿಸುವ ಕನಸು ನನಸಾಗಿದೆ ಆದರೆ ಜೆಇಇ ಅಡ್ವಾನ್ಸ್ಡ್ ಎಕ್ಸಾಂ ಅನ್ನು ಕ್ಲಿಯರ್ ಮಾಡುವುದು ನನ್ನ ಗುರಿಯಾಗಿದೆ. ನಾನು ಒಳ್ಳೆಯ ಐಐಟಿಗೆ ಸೇರಿ, ಕಂಪ್ಯೂಟರ್ ಸೈನ್ಸ್ ಇಂಜಿನಿಯರ್ ಆಗಲು ಬಯಸುತ್ತೇನೆ" ಎಂದಿದ್ದಾರೆ.


ಹಾಗೆಯೇ ಇನ್ನೊರ್ವ ವಿದ್ಯಾರ್ಥಿನಿಯಾದ ಕಾಜಲ್‌ರವರು, ಸೂಪರ್ -100 ಕಾರ್ಯಕ್ರಮಕ್ಕೆ ತಮ್ಮ ಯಶಸ್ಸಿನ‌ ಮನ್ನಣೆ ನೀಡುತ್ತಾರೆ. ಈ ಕಾರ್ಯಕ್ರಮ ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುತ್ತದೆ.

"ನಾನು ಪತ್ರಿಕೆಗಳಲ್ಲಿ ಜೆಇಇ ಪರೀಕ್ಷೆಯ ಕುರಿತಾಗಿ ಓದಿದ್ದೆ, ನಂತರ ಅದನ್ನು ಭೇದಿಸುವ ಕನಸನ್ನು ಕಂಡಿದ್ದೆ. ಇಲ್ಲಿ ಬಂದ ನಂತರ, ಶಿಕ್ಷಕರು ನನ್ನ ಆತ್ಮವಿಶ್ವಾಸ ಹೆಚ್ಚಿಸಿ, ಮಾರ್ಗದರ್ಶನ ನೀಡಿದರು. ಮುಂದೆ ಐಐಟಿಯಿಂದ ಪದವಿ ಪಡೆದು, ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲು ಬಯಸುತ್ತೇನೆ," ಎಂದೆನ್ನುತ್ತಾರೆ.


ರೇವರಿಯಲ್ಲಿ ಸೂಪರ್-100 ಕಾರ್ಯಕ್ರಮದ ಮುಖ್ಯ ಶಿಕ್ಷಕರಾದ ನವೀನ್ ಮಿಶ್ರಾ, ಅವರು ತಮ್ಮ ಐಐಟಿ ಪಾಸಾದ ಸ್ನೇಹಿತರೊಂದಿಗೆ ವಿದ್ಯಾರ್ಥಿಗಳಿಗೆ ತರಬೇತಿ‌ ನೀಡುತ್ತಿದ್ದಾರೆ. ಅವರು, “ಗ್ರಾಮೀಣ ಹಿನ್ನೆಲೆಯಿಂದ ಬಂದ ಹೆಚ್ಚಿನ ಮಕ್ಕಳನ್ನು ಐಐಟಿ ಮತ್ತು ಏಮ್ಸ್‌ಗೆ ಕಳುಹಿಸಲು ನಾವು ಬದ್ಧರಾಗಿದ್ದೇವೆ," ಎಂದು‌ ಮಿಶ್ರಾ ಹೇಳುತ್ತಾರೆ, ವರದಿ ಹಿಂದೂಸ್ಥಾನ್ ಟೈಮ್ಸ್.


ಈ ಮೂಲಕ ಈ ಇಬ್ಬರೂ ಹುಡುಗಿಯರು ಇತರರಿಗೆ ಆದರ್ಶರಾಗಿದ್ದಾರೆ. ಈ ಮೂಲಕ ಕಲಿಕೆಗೆ ಯಾವುದೇ ಭೇದವಿಲ್ಲ ಎಂಬುದನ್ನು ನಿರೂಪಿಸಿದ್ದಾರೆ. ಇವರನ್ನು ಕಂಡು ಇನ್ನಷ್ಟು ಹೆಣ್ಣುಮಕ್ಕಳು ಸ್ಪೂರ್ತಿ ಪಡೆಯಲಿ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.